ಬಿಕಾನೇರ್: ಹೊತ್ತು ಸಂದೇಶ ತರುವ ಜಗತ್ತಿನ ಪ್ರಪ್ರಥಮ ಪೋಸ್ಟ್ಮನ್ ಪಾರಿವಾಳ, ಇದು ಬೇಹುಗಾರಿಕೆಯಲ್ಲೂ ಮನುಷ್ಯನಿಗೆ ನೆರವಾಗುವ ಪಕ್ಷಿ. ಅನಾದಿಕಾಲದಿಂದಲೂ ಸಂದೇಶ ರವಾನಿಸಲು ರಾಜರಿಂದ ಹಿಡಿದು ಇಂದಿಗೂ ಪಾರಿವಾಳಗಳನ್ನು ಕೆಲವೊಮ್ಮೆ ಬಳಸಲಾಗುತ್ತಿದೆ. ತಂತ್ರಜ್ಞಾನ ಮುಂದುವರಿದರೂ ಮನುಷ್ಯ ಇನ್ನೂ ಪಾರಿವಾಳಗಳನ್ನು ಮರೆತಿಲ್ಲ. ಪತ್ರ ರವಾನೆ, ಬೇಹುಗಾರಿಕೆಗೆ ಇಂದಿಗೂ ಪಾರಿವಾಳ ಬಳಸೋ ಪದ್ದತಿಯೊಂದಿದೆ. ಈಗ ಇಂಥದ್ದೇ ಒಂದು ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.
ಇತ್ತೀಚೆಗೆ ನಿಗೂಢ ಎನಿಸುವ ರೀತಿಯಲ್ಲಿ ಪಾರಿವಾಳವೊಂದು ಭಾರತದ ಗಡಿಯೊಳಕ್ಕೆ ಹಾರಿ ಬಂದಿದೆ. ಭಾರತದ ಗಡಿಯೊಳಕ್ಕೆ ಹಾರಿ ಬಂದ ಪಕ್ಷಿ ಮತ್ಯಾವ ದೇಶದ್ದು ಅಲ್ಲ, ಬದಲಿಗೆ ಪಾಕಿಸ್ತಾನದ್ದು. ಇದನ್ನು ಭಾರತೀಯ ಸೇನಾಧಿಕಾರಿಗಳ ಸೆರೆ ಹಿಡಿದು ನೋಡಿದಾಗ ಪಾರಿವಾಳದ ಒಂದು ಕಾಲಲ್ಲಿ ಒಂದು ಉಂಗುರವಿತ್ತು. ಅದರಲ್ಲಿ ಒಂದು ಚೀಟಿ ಪತ್ತೆಯಾಗಿದ್ದು, ಇದರಲ್ಲಿ ಪಾಕಿಸ್ತಾನದ ಮೊಬೈಲ್ ನಂಬರ್ ಇರುವುದು ಕಂಡು ಬಂದಿದೆ.
ಭಾರತದ ಗಡಿ ಪ್ರವೇಶಿಸಿ ಪಾರಿವಾಳವನ್ನು ಮೊದಲಿಗೆ ಸ್ಥಳೀಯರು ನೋಡಿದರು. ಈ ವಿಚಾರವನ್ನು ನಮ್ಮ ಗಮನಕ್ಕೆ ತಂದರು. ನಾವು ಕೂಡಲೇ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ನಮಗೆ ಪಾರಿವಾಳದ ಕಾಲಲ್ಲಿ ಚೀಟಿ ಸಿಕ್ಕಿತು. ಇದರಲ್ಲಿ ಪಾಕಿಸ್ತಾನದ ನಂಬರ್ ಇತ್ತು ಎಂದು ಮಹಾಜನ್ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕೆ ಪಾಕಿಸ್ತಾನದಿಂದ ಪಾರಿವಾಳಗಳು ಸಂದೇಶಗಳಿರುವ ಬಲೂನುಗಳು ಹೊತ್ತು ತರುವುದು ಈ ಹಿಂದೆಯೇ ವರದಿಯಾಗಿತ್ತು. ಈಗ ಅಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.