ಆಗ್ರಾ: ಪ್ರೇಮ ಸೌಧ ತಾಜ್ ಮಹಲ್ ಗೆ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಇಂದು ನಡೆದಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿರು ವಿಶ್ವವಿಖ್ಯಾತ ತಾಜ್ ಮಹಲ್ ಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದೊಡನೆ ಎಚ್ಚೆತ್ತುಕೊಂಡ ಪೊಲೀಸರು, ಸ್ಥಳಕ್ಕೆ ಧಾವಿಸಿ ಪ್ರವಾಸಿಗರನ್ನು ತಾಜ್ ಮಹಲ್ ನಿಂದ ಹೊರಬರುವಂತೆ ಹೇಳಿದ್ದಾರೆ. ಈ ಮೂಲಕ ಕೆಲಹೊತ್ತು ಭಯದ ವಾತಾವರಣ ಸೃಷ್ಟಿಯಾಗಿದೆ.
ಪೊಲೀಸರಿಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ ತಾಜ್ ಮಹಲ್ ಗೆ ಬಾಂಬ್ ಇಟ್ಟಿರುವುದಾಗಿ ಬೆದರಿಸಿದ್ದಾನೆ. ಕೂಡಲೇ ತಾಜ್ ಮಹಲ್ ನ ಭದ್ರತಾ ಸಿಬ್ಬಂದಿಗೆ ಸೂಚಿಸಿ ಪ್ರವಾಸಿಗರನ್ನು ಹೊರ ಕರೆತರಲಾಗಿತ್ತು. ಆದರೆ ಅಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಕಿಡಿಗೇಡಿಯೊಬ್ಬ 112 ನಂಬರ್ ಗೆ ಕರೆಮಾಡಿ ತಾಜ್ ಮಹಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೆದರಿಸಿದ್ದಾನೆ. ಕೂಡಲೇ ನಮ್ಮ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ತಂಡ ಬಾಂಬ್ ತನಿಖಾ ದಳದೊಂದಿಗೆ ತಾಜ್ ಮಹಲ್ ಪರಿಸರದಲ್ಲಿ ಬಾಂಬ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ಬೆದರಿಕೆಯಂತೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಆಗ್ರಾದ ಪೊಲೀಸ್ ಅಧಿಕಾರಿ ಸತೀಶ್ ಗಣೇಶ್ ತಿಳಿಸಿದ್ದಾರೆ.
ಬಂದಿರುವ ಕರೆಯನ್ನು ಆಧರಿಸಿ ತನಿಖೆ ನಡೆಸಿದಾಗ ಶೇ.99ರಷ್ಟು ಅದು ಹುಸಿಕರೆಯಾಗಿದೆ. ಆದರು ನಮ್ಮ ಭದ್ರತಾ ತಂಡಗಳಾದ, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಕೇಂದ್ರ ಭದ್ರತಾ ತಂಡ ಭದ್ರತೆಯನ್ನು ಬಿಗಿಗೊಳಿಸಿದೆ ಎಂದು ಮಾಹಿತಿ ಹಂಚಿಕೊಂಡರು.
ಕೋವಿಡ್-19 ನಿಂದಾಗಿ 6 ತಿಂಗಳುಗಳ ಕಾಲ ಮುಚ್ಚಿದ್ದ ತಾಜ್ ಮಹಲ್ ಸೆಪ್ಟೆಂಬರ್ ನಂತರದಲ್ಲಿ ಕೊರೊನಾ ಮಾರ್ಗಸೂಚಿಯಂತೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿತ್ತು.