ನೆಲ್ಯಾಡಿ: ನಾಯಿಯೊಂದು ಆಟೋರಿಕ್ಷಾಕ್ಕೆ ಅಡ್ಡ ಬಂದು ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಆಲಂಕಾರು-ಮಾದೇರಿ, ನೆಲ್ಯಾಡಿ ರಸ್ತೆಯ ಸುರುಳಿ ಎಂಬಲ್ಲಿ ಎ.4ರಂದು ಸಂಜೆ ನಡೆದಿದೆ.
ರಿಕ್ಷಾ ಚಾಲಕನ್ನು ಸುಬ್ರಹ್ಮಣ್ಯ ನಾಯ್ಕ್ ಎಂದು ಗುರುತಿಸಲಾಗಿದೆ.
ಇವರು ತಮ್ಮ ಆಟೋವನ್ನು ಚಲಾಯಿಸಿಕೊಂಡು ಸುರುಳಿ ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದ ವೇಳೆ ಸುರುಳಿ ಸೇತುವೆಯ ಬಳಿ ಇಕ್ಕಟ್ಟಾದ ಜಾಗದಲ್ಲಿ ನಾಯಿಯೊಂದು ಅಡ್ಡಬಂದಿದೆ. ನಾಯಿಗೆ ರಿಕ್ಷಾ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸುಬ್ರಹ್ಮಣ್ಯ ನಾಯ್ಕ್ ಅವರು ತಕ್ಷಣ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ.
ಆಟೋದಲ್ಲಿ ಚಾಲಕ ಮಾತ್ರ ಇದ್ದು, ಗಂಭೀರ ಗಾಯಗೊಂಡಿದ್ದ ಚಾಲಕ ಸುಬ್ರಹ್ಮಣ್ಯ ನಾಯ್ಕ್ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಘಟನೆ ನಡೆದ ಸ್ಥಳ ಅಪಾಯಕಾರಿಯಾಗಿದ್ದು ಇಕ್ಕಟ್ಟಾದ ಪರಿಣಾಮ ಇಲ್ಲಿ ಹಲವರು ಅಪಘಾತಗಳು ನಡೆದಿವೆ. ಇಲ್ಲಿ ರಸ್ತೆ ಅಗಲೀಕರಣ ಆಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.