
ಪುತ್ತೂರು: ತಾಲೂಕಿನ ಸರಕಾರಿ ಹಾರಾಡಿ ಪ್ರೌಡಶಾಲೆಯ ಶಿಕ್ಷಕಿಯಾಗಿದ್ದ ವಿಟ್ಲ ನಿವಾಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ವಿಟ್ಲ ನಿವಾಸಿ ಪ್ರಿಯಾ ಕುಮಾರಿ (48) ಮೃತಪಟ್ಟವರು.

ಡಿ.13 ರಂದು ಬೆಳಿಗ್ಗೆ ವಿಟ್ಲ ಸಿಪಿಸಿಅರ್ʼಐ ಬಳಿ ಇರುವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಇವರನ್ನು ತಕ್ಷಣವೇ ಪುತ್ತೂರಿನ ಖಾಸಗಿ ಆಸ್ಫತ್ರೆಗೆ ಸಾಗಿಸಿದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.
ಕಳೆದ ಹನ್ನೆರಡು ವರ್ಷಗಳಿಂದ ಮೊನ್ನೆ ಗುರುವಾರ ತನಕ ಶಿಕ್ಷಕಿ ಪ್ರಿಯಾ ಕುಮಾರಿಯವರು ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರನ್ನು ಪಾಪೆಜಾಲು ಪ್ರೌಢಶಾಲೆಗೆ ವರ್ಗಾಯಿಸಲಾಗಿತ್ತು.
ಆಕೆ ಕೆಲಸದ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ತಂದೆ ಗಣಪ ಪೂಜಾರಿಯವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ನಿವೃತ್ತ ಯೋಧ ರಮೇಶ್ ಬಿ.ಕೆ., ಪುತ್ರಿಯರಾದ ವಂಶಿ, ದೃಷ್ಠಿ, ತಂದೆ ಗಣಪ ಪೂಜಾರಿ, ತಾಯಿ ಜಯಂತಿರವರನ್ನು ಅಗಲಿದ್ದಾರೆ.

ವರ್ಗಾವಣೆ ನಿಮಿತ್ತ ಶುಕ್ರವಾರ ಪಾಪೆಮಜಲು ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮೃತರ ಪತಿ ನಿವೃತ್ತ ಯೋಧರಾಗಿದ್ದು, ಪ್ರಸ್ತುತ ಬ್ಯಾಂಕ್ ಉದ್ಯೋಗಿಯಾಗಿದ್ದು ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಕೆಲಸದ ಒತ್ತಡವೇ ಆತ್ಮಹತ್ಯೆಗೆ ಕಾರಣವಿರಬೇಕೆಂದು ಬಲ್ಲ ಮೂಲಗಳು ತಿಳಿಸಿವೆ.











