ಮೂಡುಬಿದಿರೆ: ಇಲ್ಲಿನ ಶಿರ್ಕಾಡಿಯಲ್ಲಿ ಮನೆಯೊಂದರ ತೋಟದಲ್ಲಿ ಮೇಯಲು ಕಟ್ಟಿ ಹಾಕಿದ ದನವನ್ನು ಕದ್ದೊಯ್ದು ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರು ಆರೋಪಿಗಳು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳು ವಾಲ್ಮಾಡಿ ಗ್ರಾಮದ ಪವನ್ ಕುಮಾರ್, ಪುರಸಭೆ ವ್ಯಾಪ್ತಿಯ ಮಾರೂರಿನ ಸತೀಶ್ ಹಾಗೂ ಜಯಾನಂದ ಎನ್ನಲಾಗಿದೆ. ಇನ್ನೋರ್ವ ಆರೋಪಿ ಗಿರೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಿಯೂರಿನ ಗಣೇಶ್ ಎಂಬವರ ಮನೆಯ ತೋಟದಲ್ಲಿ ಮೂರು ದಿನಗಳ ಹಿಂದೆ ಮೇಯಲು ಕಟ್ಟಿದ್ದ ದನ ಕಳವಾಗಿತ್ತು. ಶನಿವಾರ ಅದೇ ದನವನ್ನು ಈ ನಾಲ್ವರು ಆರೋಪಿಗಳು ಮಾರಾಟ ಮಾಡುವ ಉದ್ದೇಶದಿಂದ ಟೆಂಪೊದಲ್ಲಿ ಕೊಂಡೊಯ್ಯುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಶಿರ್ತಾಡಿ ಸೇತುವೆಯ ಬಳಿ ಟೆಂಪೋವನ್ನು ತಡೆದು ನಿಲ್ಲಿಸಿದ ಸಾರ್ವಜನಿಕರು ವಿಚಾರಿಸಿದಾಗ ಆರೋಪಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ಈ ವೇಳೆ ಅಳಿಯೂರಿನ ಗಣೇಶ್ ಸ್ಥಳಕ್ಕಾಗಮಿಸಿ ಅದು ತಮ್ಮ ಮನೆಯ ಹಸುವೆಂದು ಖಚಿತಪಡಿಸಿದರು.
ಬಳಿಕ ಸಾರ್ವಜನಿಕರು ಆರೋಪಿಗಳ ಪೈಕಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.