ನವದೆಹಲಿ: ದೇಶದಲ್ಲಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಹಲವು ಕ್ರಮಗಳನ್ನು ಸೂಚಿಸಿ, ಒಟ್ಟು 12 ವಿವಿಧ ಪ್ರತಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿಯೇ ಇದೆ. ಕೊವಿಡ್ ನಿಯಂತ್ರಣ, ಪರಿಹಾರಕ್ಕಾಗಿ ಕೇಂದ್ರ ಸರ್ಕಾರ, ಆಯಾ ರಾಜ್ಯಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ದಿನೇದಿನೆ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಇದೀಗ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ, ಎನ್ಸಿಪಿ ನಾಯಕ ಶರದ್ ಪವಾರ್ ಸೇರಿ ಒಟ್ಟು 12 ಪ್ರತಿಪಕ್ಷಗಳ ನಾಯಕರ ಸಹಿ ಇರುವ ಪತ್ರ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಲ್ಪಟ್ಟಿದೆ. ಕೊವಿಡ್ ವಿರುದ್ಧ ಹೋರಾಟಕ್ಕೆ 9 ಸಲಹೆಗಳನ್ನು ನೀಡಲಾಗಿದೆ.
ಹೀಗೆ ನೀಡಲಾದ ಸಲಹೆಯಲ್ಲಿ ಮೊದಲು ನೀಡಿದ್ದು ಉಚಿತವಾಗಿ ಲಸಿಕೆ ವಿತರಣೆಯಾಗಬೇಕು ಎಂಬುದಾಗಿದೆ. ಕೇಂದ್ರ ಸರ್ಕಾರವೇ ಲಸಿಕೆ ಖರೀದಿ ಮಾಡಿ, ದೇಶಾದ್ಯಂತ ಎಲ್ಲರಿಗೂ ಉಚಿತವಾಗಿ, ಆದಷ್ಟು ಬೇಗ ಲಸಿಕೆ ನೀಡಬೇಕು. ದೇಶೀಯ ಕಂಪನಿಗಳಿಂದಾಗಲಿ, ಬೇರೆ ದೇಶಗಳ ಕಂಪನಿಗಳಿಂದಾಗಲೀ ನೀವೇ (ಕೇಂದ್ರ ಸರ್ಕಾರ) ಲಸಿಕೆ ಖರೀದಿ ಮಾಡಿ ಎಂದು ಪತ್ರದಲ್ಲಿ ಹೇಳಲಾಗಿದೆ.
ಹಾಗೇ, ಇನ್ನೂ ಮುಂದುವರಿಯುತ್ತಿರುವ ಕೇಂದ್ರ ವಿಸ್ತರಣಾ ಯೋಜನೆಯನ್ನು ಇಲ್ಲಿಗೇ ನಿಲ್ಲಿಸಿ, ಆ ಹಣವನ್ನು ಲಸಿಕೆ, ಔಷಧ, ಆಕ್ಸಿಜನ್ ಖರೀದಿಗಾಗಿ ಬಳಸಿ ಎಂದೂ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ. ಇದನ್ನು ಹಿಂದಿನಿಂದಲೂ ಪ್ರತಿಪಕ್ಷಗಳು ಹೇಳಿ ಕೊಂಡೇ ಬಂದಿವೆ.
ದೇಶೀಯವಾಗಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿ. ಇದಕ್ಕಾಗಿ ಲೈಸೆನ್ಸ್ ಪಡೆಯುವಂತೆ ಮತ್ತಷ್ಟು ಕಂಪನಿಗಳಿಗೆ ಮನವಿ ಮಾಡಿ. ಕೊವಿಡ್ನಿಂದ ಉದ್ಯೋಗ ಕಳೆದುಕೊಂಡವರಿಗೆ ತಿಂಗಳಿಗೆ 6000 ರೂಪಾಯಿಯಾದರೂ ಕೊಡಿ ಎಂದೂ ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
ಈ ಮಧ್ಯೆ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಕೊವಿಡ್ 19 ಕಾಲದಲ್ಲಿ ರೈತರು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಜಮ್ಮುಕಾಶ್ಮೀರದ ಸಿಎಂ ಫಾರೂಕ್ ಅಬ್ದುಲ್ಲಾ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್ಜೆಡಿ ಮುಖ್ಯಸ್ಥ ಡಿ.ರಾಜ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.