




ಶ್ರೀನಗರ: ಇರಾನ್ನ ಯುದ್ಧಪೀಡಿತ ಜನರ ನೆರವಿಗೆ ಜಮ್ಮು-ಕಾಶ್ಮೀರದ ಮುಸ್ಲಿಂ ಕುಟುಂಬಗಳು ನಿಂತಿದ್ದು, ಇರಾನ್ ಸಂತ್ರಸ್ತರಿಗೆ ಸಹಾಯ ಮಾಡಲು ಬೃಹತ್ ದೇಣಿಗೆ ಅಭಿಯಾನವನ್ನು ಕಾಶ್ಮೀರದಲ್ಲಿ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿವಿಧ ಮೂಲೆಗಳಲ್ಲಿ, ವಿಶೇಷವಾಗಿ ಶಿಯಾ ಬಹುಸಂಖ್ಯಾತ ಜಿಲ್ಲೆಗಳಾದ ಬುಡ್ಗಾಮ್ ಮತ್ತು ಬಾರಾಮುಲ್ಲಾದಲ್ಲಿ ಜನರು ದೇಣಿಗೆ ಸಂಗ್ರಹ ಅಭಿಯಾನ ಪ್ರಾರಂಭಿಸಿದ್ದು, ತಮ್ಮ ಮನೆಯಲ್ಲಿರುವ ಚಿನ್ನ, ನಗದು, ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿ, ಇರಾನ್ ಸಂತ್ರಸ್ತರಿಗೆ ಕಳುಹಿಸುತ್ತಿದ್ದಾರೆ.
ಈದ್ ಹಬ್ಬದ ನಂತರ ಭಾನುವಾರ ನಡೆದ ದೇಣಿಗೆ ಅಭಿಯಾನದಲ್ಲಿ ಜನರು ನಗದು ಮಾತ್ರವಲ್ಲದೇ ಚಿನ್ನಾಭರಣ, ಜಾನುವಾರುಗಳು ಮತ್ತು ಸಾಂಪ್ರದಾಯಿಕ ತಾಮ್ರದ ಪಾತ್ರೆಗಳನ್ನು ಸಹ ದೇಣಿಗೆಯಾಗಿ ನೀಡುತ್ತಿದ್ದಾರೆ. ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್ ಹಣವನ್ನು ಕೂಡ ನೀಡುತ್ತಿದ್ದಾರೆ. ಮಹಿಳೆಯರು ಚಿನ್ನ ಮತ್ತು ನಗದನ್ನು ನೀಡಿದ್ದಾರೆ. ಸುಮಾರು ಮೂರು ವರ್ಷಗಳಿಂದ ಸಂರಕ್ಷಿಸಿಟ್ಟಿದ್ದ ಚಿನ್ನವನ್ನು ವೃದ್ಧೆಯೊಬ್ಬರು ಇರಾನ್ ಜನತೆಗಾಗಿ ದಾನ ಮಾಡಿದ್ದಾರೆ. ಈ ಬಗ್ಗೆ ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ.
ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಸಂಗ್ರಹಿಸಿದ ದೇಣಿಗೆಗಳ ಫೋಟೋಗಳನ್ನು ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಹಂಚಿಕೊಂಡ ರಾಯಭಾರ ಕಚೇರಿಯು, ಈ ದಯೆಯ ಕಾರ್ಯವು ನಮ್ಮ ಜನತೆಯ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಪ್ರತಿಕ್ರಿಯಿಸಿದೆ.
ದೇಣಿಗೆಗಳ ಫೋಟೋಗಳನ್ನು ಹಂಚಿಕೊಂಡ ಇರಾನ್ ರಾಯಭಾರ ಕಚೇರಿಯು X ಪೋಸ್ಟ್ನಲ್ಲಿ, ‘ಕೃತಜ್ಞತೆಯಿಂದ ತುಂಬಿದ ಹೃದಯಗಳಿಂದ, ಮಾನವೀಯ ಬೆಂಬಲ ಸಿಕ್ಕಿದೆ. ಒಗ್ಗಟ್ಟಿನ ಮೂಲಕ ಇರಾನ್ ಜನರೊಂದಿಗೆ ನಿಂತಿದ್ದಕ್ಕಾಗಿ ಕಾಶ್ಮೀರದ ದಯಾಳು ಜನರಿಗೆ ನಾವು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ದಯೆ ಮತ್ತು ಮಾನವೀಯತೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಧನ್ಯವಾದಗಳು ಭಾರತ ಎಂದು ಇರಾನ್ ಕೃತಜ್ಞತೆ ಸಲ್ಲಿಸಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.








