ನವದೆಹಲಿ: ಕೊರೊನಾ ಕಾರಣದಿಂದ ಕಳೆದ ವರ್ಷ ರದ್ದು ಪಡಿಸಲಾಗಿದ್ದ ಅಮರನಾಥ ಯಾತ್ರೆಗೆ ಈ ಬಾರಿ ಗ್ರೀನ್ ಸಿಗ್ನಲ್ ಲಭಿಸಿದೆ. ಜೂನ್ 28ರಿಂದ ಯಾತ್ರೆ ಆರಂಭವಾಗಲಿದೆ ಎಂದು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಹೇಳಿದ್ದಾರೆ. ಜೂ.28 ರಿಂದ ಆರಂಭವಾಗುವ ಯಾತ್ರೆ 56 ದಿನಗಳ ಕಾಲ ನಡೆಯಲಿದ್ದು, ಆಗಸ್ಟ್ 22ರ ರಕ್ಷಾ ಬಂಧನದ ದಿನ ಅಂತ್ಯವಾಗಲಿದೆ.
ಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಏಪ್ರಿಲ್ 1 ರಿಂದ ಆರಂಭವಾಗುವ ನೋಂದಣಿ ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ರೆಜಿಸ್ಟರ್ ಮಾಡಿಕೊಳ್ಳಬೇಕಿದೆ. ದೇಶಾದ್ಯಂತ ಇರುವ ಪಂಜಾಜ್ ನ್ಯಾಷನಲ್ ಬ್ಯಾಂಕ್, ಜಮ್ಮು ಕಾಶ್ಮೀರ ಬ್ಯಾಂಕ್, ಯೆಸ್ ಬ್ಯಾಂಕ್ಗೆ ಸೇರಿದ 446 ಶಾಖೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕಳೆದ ವರ್ಷ ಕೊರೊನಾ ಕಾರಣದಿಂದ ಸನ್ಯಾಸಿಗಳಿಗೆ ಮಾತ್ರ ಅಮರನಾಥ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. 2019ರಲ್ಲಿ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಯಾತ್ರೆಯನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು.
ಪ್ರತಿ ವರ್ಷ ಅಮರನಾಥದಲ್ಲಿ ಶಿವನ ಲಿಂಗ ದರ್ಶನ ಪಡೆಲು ಸುಮಾರು 3 ಲಕ್ಷ ಮಂದಿ ಆಗಮಿಸುತ್ತಾರೆ. ಇಲ್ಲಿ ವರ್ಷದಲ್ಲಿ ಕೇವಲ 45 ದಿನಗಳು ಮಾತ್ರ ಶಿವಲಿಂಗದ ದರ್ಶನ ಸಿಗುತ್ತದೆ. ಮಂಜಿನಿಂದ ನಿರ್ಮಾಣವಾಗುವ ಶಿವಲಿಂಗ ದರ್ಶನ ಪಡೆಯಲು ವರ್ಷವಿಡೀ ಭಕ್ತರು ಕಾದು ಕುಳಿತಿರುತ್ತಾರೆ.