Wednesday, July 22, 2026
spot_imgspot_img
spot_imgspot_img

ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ – ಆಂಧ್ರ ದತ್ತಿ ಇಲಾಖೆ ಅಧಿಕಾರಿ ಬಂಧನ

- Advertisement -
- Advertisement -

ಅಮರಾವತಿ: ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಪ್ರಕರಣದಲ್ಲಿ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಕಳಿಂಗಿರಿ ಶಾಂತಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.ಏಪ್ರಿಲ್ 7 ರಂದು ವಿಜಯವಾಡ ಮತ್ತು ವಿಶಾಖಪಟ್ಟಣಂನ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿತ್ತು. ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಶಾಂತಿ ಅವರನ್ನು ಅರೆಸ್ಟ್‌ ಮಾಡಲಾಗಿದೆ.

ಶಾಂತಿ ತನ್ನ ಆದಾಯದ ಮೂಲಗಳನ್ನು ಮೀರಿ ಸಂಪತ್ತು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ, ವಿಜಯವಾಡ ಶ್ರೇಣಿಯ ಎಪಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ನಿವಾಸ, ಅವರ ತಾಯಿಗೆ ಸೇರಿದ ಬಟ್ಟೆ ಅಂಗಡಿ ಮತ್ತು ಸಹೋದರಿಯ ನಿವಾಸ ಸೇರಿದಂತೆ ರಾಜ್ಯಾದ್ಯಂತ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದರು. ವಿಶಾಖಪಟ್ಟಣಂನಲ್ಲಿರುವ ಮತ್ತೊಂದು ಆಸ್ತಿಯಲ್ಲೂ ಶೋಧ ನಡೆಸಲಾಯಿತು.

ದಾಳಿಯ ಸಮಯದಲ್ಲಿ ತನಿಖಾಧಿಕಾರಿಗಳು ಹಲವಾರು ಅಪರಾಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗೆ ಸಂಬಂಧಿಸಿದೆ ಎನ್ನಲಾದ ಆಸ್ತಿಗಳ ಗಣನೀಯ ಪ್ರಮಾಣದ ವಿವರಗಳನ್ನು ಪತ್ತೆಹಚ್ಚಿದ್ದಾರೆ. ವಿಶಾಖಪಟ್ಟಣಂನಲ್ಲಿರುವ ವಸತಿ ಫ್ಲಾಟ್, ವಿನಯವಾಡದಲ್ಲಿರುವ ಜಿ+2 ಕಟ್ಟಡ, ಸುಮಾರು 770 ಗ್ರಾಂ ಚಿನ್ನಾಭರಣ, ಸುಮಾರು 3 ಕೆಜಿ ಬೆಳ್ಳಿ ವಸ್ತುಗಳು, 1.15 ಲಕ್ಷ ರೂ. ನಗದು ಮತ್ತು ಸುಮಾರು 3 ಲಕ್ಷ ರೂ. ಬ್ಯಾಂಕ್ ಠೇವಣಿಗಳಿಗೆ ಸಂಬಂಧಿಸಿದ ವಿವರಗಳನ್ನು ಎಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವೋಕ್ಸ್‌ವ್ಯಾಗನ್ ಪೋಲೋ ಕಾರು, ಮೋಟಾರ್‌ಸೈಕಲ್, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಹ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

2020 ರಲ್ಲಿ ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಮೂಲಕ ನೇಮಕಗೊಂಡ ಶಾಂತಿ, ವಿಶಾಖಪಟ್ಟಣಂ ಮತ್ತು ವಿಜಯವಾಡ ಎರಡರಲ್ಲೂ ಸೇವೆ ಸಲ್ಲಿಸಿದ್ದರು. ಅಧಿಕಾರಿಗಳ ಪ್ರಕಾರ, ಅವರು 2024ರ ಜುಲೈನಿಂದ 2026ರ ಮಾರ್ಚ್ ವರೆಗೆ ಅಮಾನತುಗೊಂಡಿದ್ದರು. ದಾಳಿಯ ಸಮಯದಲ್ಲಿ ಹೊಸ ನಿಯೋಜನೆಗಾಗಿ ಕಾಯುತ್ತಿದ್ದರು.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಮತ್ತು ಸೆಕ್ಷನ್ 13(1)(b) ಅಡಿಯಲ್ಲಿ ಎಸಿಬಿ ಈ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಬಂಧನದ ನಂತರ, ಶಾಂತಿಯನ್ನು ವಿಜಯವಾಡದಲ್ಲಿರುವ ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಏಪ್ರಿಲ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನಂತರ ಅವರನ್ನು ಜಿಲ್ಲಾ ಜೈಲಿಗೆ ಸ್ಥಳಾಂತರಿಸಲಾಯಿತು. ವಶಪಡಿಸಿಕೊಂಡ ಆಸ್ತಿಗಳ ಹೆಚ್ಚಿನ ಶೋಧ ಮತ್ತು ಮೌಲ್ಯಮಾಪನ ಇನ್ನೂ ನಡೆಯುತ್ತಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!