
ವಿಟ್ಲ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕೊಳ್ನಾಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೊಳ್ನಾಡು, ಕನ್ಯಾನ, ಕರೋಪಾಡಿ, ಸಾಲೆತ್ತೂರು, ಮಂಚಿ ಗ್ರಾ.ಪಂಚಾಯತ್ ಹಾಲಿ ಸದಸ್ಯರು, ಮಾಜಿ ಸದಸ್ಯರು, ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದ ಅಭ್ಯರ್ಥಿಗಳು, ವಲಯಾಧ್ಯಕ್ಷರುಗಳು, ಬೂತ್ ಅಧ್ಯಕ್ಷರುಗಳು, ವಿವಿಧ ಮುಂಚೂಣಿ ಘಟಕಗಳ ಕಾರ್ಯಕರ್ತರ ಸಂವಾದ ಕಾರ್ಯಕ್ರಮವು ಕೊಳ್ನಾಡು ಗ್ರಾಮದ ಕುಡ್ತಮುಗೇರು ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷರಾದ ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.


ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮಾಜಿ ಸಚಿವರು, ಶಾಸಕರಾದ ರಾಮನಾಥ ರೈ ನೇತೃತ್ವದಲ್ಲಿ ತಾಲೂಕಿನ ಆರು ಜಿ.ಪಂಚಾಯತ್ ಕ್ಷೇತ್ರಗಳಲ್ಲಿ ಸಂವಾದ ಕಾರ್ಯಕ್ರಮವನ್ನು ನೂತನ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ನಡೆಸಿದರು. ಪಕ್ಷ ಮೊದಲು, ಅದರ ಸಂಘಟನೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ತೊಡಗಿಸಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ತನ್ನನ್ನು ಗೆಲ್ಲಿಸಿದ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳಿಗೆ ಆಭಾರಿಯಾಗಿದ್ದೇನೆ. ನಿಮ್ಮ ಬೇಡಿಕೆಗಳಿಗೆ ವಿಧಾನ ಪರಿಷತ್ ನಲ್ಲಿ ಗಮನಸೆಳೆಯುವುದಾಗಿ ತಿಳಿಸಿದರು.


ಮಾಜಿ ಸಚಿವರಾದ ರಮನಾಥ ರೈ ಮಾತನಾಡುತ್ತಾ, ತಾನು ಕೊಳ್ನಾಡು ಜಿ.ಪಂಚಾಯತ್ ಕೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಅದರಲ್ಲಿಯೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತುಂಬೆ ಡ್ಯಾಂನಿಂದ ಕೇರಳ ಗಡಿಬಾಗವಾದ ಕರೋಪಾಡಿಗೆ ಸೇರಿ ಕ್ಷೇತ್ರದ ಇನ್ನಿತರ ಗ್ರಾಮಗಳಿಗೆ ತಲುಪಿಸಿ ಜನರ ಬವಣೆ ತೀರಿಸಿದ ಆತ್ಮತೃಪ್ತಿ ನನಗಿದೆ ಎಂದು ತಿಳಿಸಿದರು.


ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತಾಡಿ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಇಬ್ಬರು ಪುರುಷ ಮತ್ತು ಒರ್ವ ಮಹಿಳೆಯರನ್ನು ಸಂಯೋಜಕರಾಗಿ ನೇಮಿಸಲಾಗುವುದು. ಮತ್ತು ಹಾಲಿ, ಮಾಜಿ ಸದಸ್ಯರುಗಳಿಗೆ ಪಕ್ಷದ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ತರಬೇತಿ ಕಾರ್ಯಗಾರ ನಡೆಸುವುದಾಗಿ ತಿಳಿಸಿದರು.


ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಪಿ.ಅಬ್ದುಲ್ ರಹಿಮಾನ್ ಸಂವಾದದಲ್ಲಿ ಭಾಗವಹಿಸಿ ವಿಧಾನ ಪರಿಷತ್ ಸದಸ್ಯರುಗಳು ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗದೇ ಅನುದಾನಗಳನ್ನು ಹಂಚಿ ನೀಡಬೇಕು. ಮತ್ತು ಪಕ್ಷದ ಸ್ಥಳೀಯ ಜನಪ್ರತಿನಿದಿಗಳನ್ನು ಕಡೆಗಣಿಸಬಾರದು ಎಂದು ಆಕ್ಷೇಪಿಸಿದರು. ಮಂಚಿ ಗ್ರಾಮ ಪಂಚಾಯತ್ ಸದಸ್ಯರಾದ ಬದ್ರುದ್ದೀನ್ ಮಾತನಾಡಿ ಕಳೆದ ಗ್ರಾ.ಪಂಚಾಯತ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಸದಸ್ಯರುಗಳಿಗೆ ಪಕ್ಷ ಹಾಗೂ ನಾಯಕರುಗಳು ಯಾವುದೇ ರೀತಿಯ ಮಣೆಹಾಕಬಾರದು. ಅವರನ್ನು ಪಕ್ಷದಿಂದ ಉಚ್ಚಾಟಿಸಿಬೇಕೆಂದು ನೇರವಾಗಿ ಪಕ್ಷದ ಹಿರಿಯ ನಾಯಕರುಗಳಿಗೆ ಮಾತಿನ ಮೂಲಕ ಛಾಟಿ ಬೀಸಿದರು. ಕೊಳ್ನಾಡು ಗ್ರಾ.ಪಂಚಾಯತ್ ಮಾಜಿ ಸದಸ್ಯರಾದ ಪವಿತ್ರ ಪೂಂಜ, ಹಾಲಿ ಸದಸ್ಯೆ ಜಯಂತಿ ಎಸ್.ಪೂಜಾರಿ ಪಕ್ಷದ ನಾಯಕರುಗಳ ಕಾರ್ಯವೈಖರಿಯ ಬಗ್ಗೆ ದೂರುಗಳಿಗೆ ಸ್ಪಂದಿಸಬೇಕೆಂದು ನಾಯಕರುಗಳಿಗೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಮನಾಥ ರೈ, ವಿಧಾನ ಪರಿಷತ್ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್,ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ,ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಸುದೀಪ್ ಕುಮಾರ್,ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರುಗಳಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ,ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರುಗಳಾದ ಉಸ್ಮಾನ್ ಕರೋಪಾಡಿ,ಅಬ್ಬಾಸ್ ಅಲಿ,ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅದ್ಯಕ್ಷರಾದ ಅರ್ಶದ್ ಶರವು, ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ.ಲತೀಪ್ ಪರ್ತಿಪ್ಪಾಡಿ,ಕಿಸಾನ್ ಘಟಕದ ಸೋಮಶೇಖರ ಗೌಡ,ಕೊಳ್ನಾಡು ವಲಯ ಅದ್ಯಕ್ಷರಾದ ಮೂಸಾ ಖಾದರ್, ಮಜೀದ್ ಕನ್ಯಾನ, ಹಸೈನಾರ್ ತಾಳಿತ್ತನೂಜಿ ಹಾಗೂ ಹಾಲಿ ಮಾಜಿ ಸದಸ್ಯರುಗಳು ಪಕ್ಷದ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಸ್ವಾಗತಿಸಿ ಯುವಕಾಂಗ್ರೆಸ್ ಅದ್ಯಕ್ಷರಾದ ಇಬ್ರಾಹಿಂ ನವಾಝ್ ವಂದಿಸಿದರು.









